
ಇದು ಕಪ್ಪು ಬಿಳುಪಿನ ಚಿತ್ರ. ಕರ್ನಾಟಕ ಸರಕಾರದ ವಾರ್ತಾ ಇಲಾಖೆ ೧೯೭೨ರಲ್ಲಿ ನಿರ್ಮಿಸಿದ್ದು.
ಗಿರೀಶ್ ಕಾರ್ನಾಡರ ನಿರ್ದೇಶನದ ಈ ಚಿತ್ರದಲ್ಲಿ ಧಾರವಾಡದ ಮತ್ತು ಬೇಂದ್ರೆಯವರ ವ್ಯಕ್ತಿತ್ವ ಎರಡೂ ಒಂದರೊಡನೆ ಇನ್ನೊಂದು ಸೇರಿಕೊಂಡಿವೆ
ಧಾರವಾಡದ ಬಯಲುಸೀಮೆ ಮಲೆನಾಡಿನ ಮಿಶ್ರಣದ ಹದ ಮೊದಲ ಹಂತದಲ್ಲಿ ಕಂಡು ಬರುತ್ತದೆ.
ಬೇಂದ್ರೆಯವರ ವಿಚಿತ್ರವೆನಿಸುವ ಜೀವನ ಶೈಲಿ,ಕುತ್ತಿಗೆಗೆ ಧರಿಸಿದ ಉದ್ದನೆಯ ರುದ್ರಾಕ್ಷಿ ಮಾಲೆ, ಮನೆಯಲ್ಲಿರುವ ದೊಡ್ಡ ಗ್ರಂಥ ಭಂಡಾರ,ಪ್ರಯೋಗ ಶಾಲೆಯೆನಿಸುವಂತೆ ತೂರುವ ವಸ್ತುಗಳ ರಾಶಿ. ಅದರಲ್ಲಿ ಮಾಯ ಚೌಕ, ಅಂಕಿಗಳಿಗೆ ಸಂಬಂಧಿಸಿದ ಪಟಗಳು, ಅರವಿಂದ, ಶ್ರೀಮಾತೆಯವರ ಭವ್ಯ ಪಟಗಳನ್ನು ಕ್ಯಾಮೆರಾ ಕಣ್ಣು ಚೆನ್ನಾಗಿ ಸೆರೆ ಹಿದಿದಿದೆ. ಬೇಂದ್ರೆಯ ಚದುರಿರುವ ಅಪಾರ ಶಕ್ತಿಯನ್ನು ಪುಸ್ತಕ, ವಸ್ತು,ಅವರ ದೇಹದ ಚಟುವಟಿಕೆಗಳು ತೋರಿಸುತ್ತವೆ.
ಬೇಂದ್ರೆಯ ವ್ಯಕ್ತಿತ್ವ ಕವಿಯ ಆಚೆಗೂ ಚಾಚಿರುವುದನ್ನು ಒಂದು ಕಡೆ ಮಂಗನಿಗೆ ತಿನಿಸನ್ನು ನೀಡಲು ಚಾಚಿರುವ ಕೈ ಸೆರೆಹಿಡಿದರೆ, ಇನ್ನೊಂದು ಕಡೆ ಹಾವಾಡಿಗನೊಡನೆ ಮಾತನಾಡುತ್ತಿರುವ ಬೇಂದ್ಯ ದೃಶ್ಯ ತೋರಿಸುತ್ತದೆ.ಅಲ್ಲಿ ಕ್ಯಾಮೆರಾ ಗಾರುಡಿಗ ಬೇಂದ್ರೆ ಮತ್ತು ಹಾವಾಡಿಗರಿಂದ ಕೆಳಸರಿದು ಬುಟ್ಟಿಯಲ್ಲಿ ಹೆಡೆ ಬಿಚ್ಚಿರುವ ನಾಗನತ್ತ ಚಲಿಸುವ ವೇಗ ಬೇಂದ್ರೆಯ ವಿವಿಧ ರೀತಿಯ ಜನರೊಡನೆ ಸಲೀಸಾಗಿ ಬೆರೆಯುತ್ತಿದ್ದ ರೀತಿಯ ಪ್ರತೀಕ.
’ಅಂದ ತುಂಬಿತ್ತ ಹಾಲಗೇರಿ….’, ’ಇನ್ನು ಯಾಕ ಬರಲಿಲ್ಲಾವ ಹುಬ್ಬಳ್ಳಿಯಾವ’ ಹಾಡುಗಳು ಧಾರವಾಡದ ಬದುಕನ್ನು, ಪ್ರಕೃತಿಯನ್ನು ಸೊಗಸಾಗಿ ಹೇಳಿವೆ. ’ಸೊಂಟದ ಮೇಲೆ ಕೈ ಇಟ್ ಕೊಂಡು…’ ಕವಿತೆಯ ದೃಶ್ಯದಲ್ಲಿ ಬರುವ ಹೆಣ್ಣು, ಆಕೆಯ ವಂಕಿ ಇರುವ ನವಿರಾದ ತೋಳು, ಕಣ್ಣಿನ ಮಾದಕತೆಗಳು ಬೇಂದ್ರೆಯ ಅನೇಕ ಕವಿತೆಯಲ್ಲಿನ ಶೃಂಗಾರವನ್ನು ಅಚ್ಚುಕಟ್ಟಾಗಿ ತಂದಿದೆ.
ಗಿರೀಶ್ ಕಾರ್ನಾಡರ ಹಿನ್ನೆಲೆಯ ಧ್ವನಿ ಇಡೀ ಸಾಕ್ಯಚಿತ್ರದ ಕಳೆ ಏರಿಸಿದೆ. ಬೇಂದ್ರೆ ಸೊಗಸಾಗಿ ಕಾವ್ಯ ವಾಚನ ಮಾಡುತ್ತಿದ್ದರೆಂದು ಅವರ ವಾಚನ ಕೇಳಿದ್ದವರು ಹೇಳಿದ್ದುಂಟು. ಅದನ್ನು ನೋಡಲು ಆಗದ ನಮ್ಮಂತ ಹೊಸಪೀಳಿಗೆಯವರಿಗೆ ಕೇವಲ ಕೇಳಿ ಮಾತ್ರ ಗೊತ್ತು.ಈ ಸಾಕ್ಯಚಿತ್ರ ಬೇಂದ್ರೆಯ ಧ್ವನಿಯನ್ನು ಸದಾ ಕಾಲಕ್ಕೆ ಉಳಿಸಿಕೊಟ್ಟಿದೆ.
ವಿಶ್ವಮಾತೆಯ ಕವನ ವಾಚನದಲ್ಲಿ ಬೇಂದ್ರೆ ನಂಬಿಕೊಂಡು ಬಂದಿದ್ದ ತಾಯಿ ತತ್ವವು-ಅವರ ತಾಯಿಯ ಫೊಟೋ ದ ಮೇಲೆ ಕ್ಯಾಮೆರಾ ಹರಿಯುವುದರಿಂದ ಮೊದಲಾಗಿ ಪಾಂಡಿಚೇರಿಯ ಶ್ರೀಮಾತೆಯರ ಫೋಟೋದ ತನಕವೂ ಹರಿಯುತ್ತದೆ. ಧಾರ ವಾಡ ತಾಯಿಯ ಚಿತ್ರಣವಂತೂ ಬಯಲುಸೀಮೆ ಮಲೆನಾಡಿನ ಮಿಶ್ರಣದ ಜೊತೆ ಅಲ್ಲಲ್ಲಿ ಬರುತ್ತಲೆ ಇರುತ್ತದೆ.
ಅತಿ ದೊಡ್ಡ ವಿಷಯವನ್ನೂ ಕೂಡ ಕ್ಯಾಮೆರಾ ಗಡಿಬಿಡಿ ಇಲ್ಲದೆ ಸೆರೆ ಹಿಡಿದುಕೊಟ್ಟದ್ದನ್ನು ಗಿರೀಶ್ ಕಾರ್ನಾಡರ ನಿರ್ದೇಶನದ ಈ ಚಿತ್ರ ಮಜಬೂತಾಗಿ ತೋರಿಸಿಕೊಟ್ಟಿದೆ.
ಸ್ಕ್ರಿಪ್ಟ್ ಬರವಣಿಗೆ ಮತ್ತು ದೃಶ್ಯೀಕರಣಕ್ಕಿಂತ ಮೊದಲು ಮಾಡಿಕೊಂಡಿರುವ ತಯಾರಿಯ ಫಲವಾಗಿ ಈ ಸಾಕ್ಯಚಿತ್ರ ಅರ್ಥಪೂರ್ಣವಾಗಿ ಬಂದಿದೆ. ಕುರಿತು ಸಾಕ್ಯಚಿತ್ರ ಇದು ದೃಶ್ಯ ಮಾಧ್ಯಮದಲ್ಲಿ ಬೇಂದ್ಯವರನ್ನು ಹಿಡಿಯುವ ರೋಮಾಂಚನಕಾರಿ ಪ್ರಯತ್ನ.
ಇದಕ್ಕೆ ಛಾಯಾಗ್ರಹಣ ಒದಗಿಸಿದವರು ಖ್ಯಾತ ಚಿತ್ರ ನಿರ್ದೇಶಕ ಗೋವಿಂದ ನಿಹಲಾನಿ . ಒಬ್ಬ ಛಾಯಾಗ್ರಾಹಕನಾಗಿಯೂ ತನ್ನೊಳಗಿದ್ದ ಸಿನಿಮಾವನ್ನು ಚೆಂದಗೊಳಿಸುವ ಬಗೆಯನ್ನು ತನ್ನ ಸೀಮೆಯಲ್ಲೇ ತುಂಬಿದ್ದಾರೆ ನಿಹಲಾನಿ. ಅದರಲ್ಲೂ ಮಳೆಯ ದೃಶ್ಯದಲ್ಲಿ ಮೈದುಂಬಿದ ಬೇಂದ್ರೆಯನ್ನು ಹಿಡಿದ ಬಗೆ ನೋಡುಗರನ್ನು ಮಳೆಯಲ್ಲಿ ನೆನೆಸಿಬಿಡುತ್ತದೆ.
ಕೊನೆಯ ದೃಶ್ಯ: ಜೋರಾಗಿ ಮಳೆ ಸುರಿಯುತ್ತಿದೆ..ರಸ್ತೆ ಮೇಲೆ ಮೂವರು ಕಾವ್ಯ ಪ್ರೇಮಿಗಳು ನಿಂತಿದ್ದಾರೆ.ಮೂವರು ಕಾವ್ಯದಲ್ಲಿ ಮುಳುಗಿದ್ದಾರೆ. ಒಂದು ಕಡೆ ಜಿ.ಬಿ.ಜೋಶಿ,ಇನ್ನೊಂದು ಕಡೆ ಕೀರ್ತಿನಾಥ ಕುರ್ತಕೋಟಿ, ಮಧ್ಯದಲ್ಲಿ ಬೇಂದ್ರೆ.ಮಳೆ ಸುರಿಯುತ್ತಿದೆ,ಹೊರಗಿನ ಮಳೆಯಲ್ಲಿ ಮೂವರು ಸ್ವಲ್ಪ ಸ್ವಲ್ಪ ನೆನೆಯುತ್ತಿದ್ದಾರೆ. ಕಾವ್ಯದ ಮಳೆಯಲ್ಲಿ ಪೂರಾ ನೆನೆದು ತೊಪ್ಪೆಯಾಗಿದ್ದಾರೆ. ಕೊಡೆಯಿಂದ ಹಣುಕುತ್ತಿರುವ ಮಳೆಹನಿ ಬೇಂದ್ರೆಯವರ ಹೆಗಲ ಮೇಲೆ ಇಳಿಯುತ್ತಿದೆ.ಹೊರಗೂ ಮಳೆ, ಒಳಗೂ ಮಳೆ, ನಿರಂತರ. ಧಾರವಾಡದ ಶ್ರಾವಣ,ಕಾವ್ಯದ ಶ್ರವಣಗಳನ್ನು ಈ ದೃಶ್ಯ ನೋಡುಗರ ಮನಸ್ಸು ನೆನೆಯುವಂತೆ ಮಾಡಿದೆ.
ಬೇಂದ್ರೆಯವರನ್ನು ಕುರಿತ ಸಾಕ್ಯಚಿತ್ರ ಅಪೂರ್ವವಾದ ಸಾಂಸ್ಕೃತಿಕ ದಾಖಲೆ.
This page was last modified on 05 December 2009 at 10:33.
ಹೆಚ್ಚಿನ ಮಾಹಿತಿಗಾಗಿ ಅಥವಾ ಸಲಹೆಗಳಿಗಾಗಿ ಕೆಳಗಿನ ಈ ಮೇಲ್ ವಿಳಾಸದಲ್ಲಿ /ದೂರವಾಣಿ ಸಂಖ್ಯೆಯ ಮೂಲಕ ನಮ್ಮನ್ನು ಸಂಪರ್ಕಿಸಿ. projectmanager@kanaja.in | +91.80.2203.3297